-->

Wednesday, February 2, 2011

ಕನ್ನಡ ಪತ್ರಿಕೆಗಳ ಕುರುಡುತನ, ಕಿವುಡುತನಕ್ಕೆ ಮದ್ದುಂಟೆ ?

ಭಯೋತ್ಪಾದಕ ವರದಿಗಳನ್ನು ಬರೆಯುವುದರಲ್ಲಿ ನಿಷ್ಣಾತರಾಗಿರುವ ನಮ್ಮ ಕನ್ನಡ ಪತ್ರಕರ್ತರಿಗೆ ಹಾಗು ಅವುಗಳನ್ನು ಭಾರೀ ಪ್ರಾಮುಖ್ಯತೆಯೊಂದಿಗೆ ಸರಣಿ ಧಾರಾವಾಹಿಯಂತೆ ಪ್ರಕಟಿಸುವ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಹಠಾತ್ತನೆ ಕುರುಡುತನ ಹಾಗು ಕಿವುಡುತನದ ರೋಗ ತಾತ್ಕಾಲಿಕವಾಗಿ ತಗುಲುವುದುಂಟು. ಈ ರೋಗ ಕೆಲವೇ ಕೆಲವು ನಿರ್ದಿಷ್ಟ ಸಮಯ (ಅಂದರೆ ದಿನ) ಮಾತ್ರ ಬಾಧಿಸಿ ನಂತರ ಮಾಯವಾಗುತ್ತದೆ. ಈ ಸಂದರ್ಭದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಎಷ್ಟೇ ಪ್ರಮುಖ ಬೆಳವಣಿಗೆಗಳು ಘಟಿಸಿದರೂ ಈ ಪತ್ರಕರ್ತರು ಹಾಗು ಪತ್ರಿಕೆಗಳಿಗೆ ಅದು ಕಣ್ಣಿಗೆ ಬೀಳುವುದೂ ಇಲ್ಲ, ಕಿವಿಗೆ ಕೇಳುವುದೂ ಇಲ್ಲ.

ನಿನ್ನೆ ಅಂದರೆ ಫಬ್ರವರಿ 1,2011ರಂದು ಮತ್ತೆ ಕನ್ನಡದ ಹೆಚ್ಚಿನ ಪತ್ರಿಕೆಗಳು ಹಾಗು ಪತ್ರಕರ್ತರು ಈ ಕುರುಡುತನ ಹಾಗು ಕಿವುಡುತನದ ರೋಗ ಪೀಡಿತರಾಗಿದ್ದಾರೆ. ಇಡೀ ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾದ ಮಾಲೆಗಾಂವ್ ಸ್ಫೋಟದ ತನಿಖೆಯಿಂದ ಕೇಸರಿ ಭಯೋತ್ಪಾದನೆಯ ಬೃಹತ್‌ ಜಾಲ ದೇಶದಲ್ಲಿರುವುದು ಬಯಲಾಯಿತು .   ಇಂತಹ ಬಾಂಬ್ ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡ ಆರೋಪ ಹೊತ್ತಿದ್ದ ಕರ್ನಾಟಕದ ಪ್ರವೀಣ್ ಮುತಾಲಿಕ್‌ನನ್ನು ಮಹಾರಾಷ್ಟ್ರ ಪೊಲೀಸರು ಇತ್ತೀಚಿಗೆ ಬಂಧಿಸಿದರು. ಆ ಬಳಿಕ ಮಂಗಳವಾರ ಆತನನ್ನು ಮಹಾರಾಷ್ಟ್ರದ    ವಿಶೇಷ ಮೋಕ ನ್ಯಾಯಾಯಲಕ್ಕೆ ಹಾಜರು ಪಡಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರವೀಣ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಹೊತ್ತಿರುವ ಅಭಿನವ್ ಭಾರತ್ ಸಂಘಟನೆಯ ರೂವಾರಿ ಲೆ.ಕ.ಶ್ರೀಕಾಂತ ಪುರೋಹಿತ್‌ನ ಬಂಟನಾಗಿದ್ದವನು. ಹಾಗಾಗಿ ಕೇಸರಿ ಭಯೋತ್ಪಾದನಾ ಜಾಲದಲ್ಲಿ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ, ಅವರ ಯೋಜನೆಗಳು ಏನೇನು ಎಂಬುದರ ಕುರಿತು ಬಹಳಷ್ಟು ಪ್ರಮುಖ ಮಾಹಿತಿಗಳನ್ನು ಈತನ ವಿಚಾರಣೆಯಿಂದ ಪಡೆಯುವ ಸಾಧ್ಯತೆಯಿದೆ. ಹಾಗಾಗಿ ಈತನ ಬಂಧನ ದೇಶದ ಯಾವುದೇ ಪತ್ರಿಕೆಗೆ ಪ್ರಮುಖ ಸುದ್ದಿ. ಜೊತೆಗೆ ಕರ್ನಾಟಕದ ವ್ಯಕ್ತಿಯೊಬ್ಬ ಇಂತಹ ಪ್ರಮುಖ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಇದೀಗ ಸೆರೆಯಾಗಿರುವುದು ಕನ್ನಡದ ಪತ್ರಿಕೆಗಳಿಗೆ ಸ್ವಾಭಾವಿಕವಾಗಿಯೇ ಬಹಳ ದೊಡ್ಡ ಸುದ್ದಿಯಾಗಬೇಕಿತ್ತು.

ಆದರೆ ದುರಂತ ನೋಡಿ. ಒಂದು ನಿರ್ದಿಷ್ಟ ಸಮುದಾಯದ ಮನುಷ್ಯರು ಜೋರಾಗಿ ಕೆಮ್ಮಿದರೂ ಅಲ್ಲಿ ಭಾರೀ ಸ್ಫೋಟದ ತಯಾರಿ ನಡೆಯುತ್ತಿದೆ...ಭಯೋತ್ಪಾದಕ ಜಾಲ ಸಕ್ರಿಯವಾಗಿದೆ... ಪಾಕಿಸ್ತಾನದವರು ಬಂದು ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ನೆಲೆಸಿದ್ದಾರೆ... ಮಸೀದಿ, ಮದ್ರಸಗಳಲ್ಲಿ ಭಯೋತ್ಪಾದಕ ತರಬೇತಿ ನೀಡಲಾಗುತ್ತಿದೆ...ಎಂದು ವರದಿಯ   ಹೆಸರಲ್ಲಿ ಪುಟಗಟ್ಟಲೆ ಕತೆ ಹೊಸೆಯುವ ಕನ್ನಡದ ಬಹುತೇಕ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ.

ದೇಶ, ವಿದೇಶಗಳ ಯಾವ ಮೂಲೆಯಲ್ಲಿ ಭಯೋತ್ಪಾದನೆ ಕುರಿತ ಕೇವಲ ವದಂತಿ ಇದ್ದರೂ ಅದರ ವಾಸನೆಯನ್ನು ಗ್ರಹಿಸುವ ಮೂಗು ಉದಯವಾಣಿಯದ್ದು.  ಆದರೆ ಇಲ್ಲೇ ತನ್ನ ಮೂಗಿನಡಿಯಲ್ಲೇ ದೇಶವನ್ನೇ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ ಪ್ರಕರಣವೊಂದರ ಪ್ರಮುಖ ಆರೋಪಿ ಬಂಧಿಸಲ್ಪಟ್ಟಿರುವುದು ಮಾತ್ರ ಉದಯವಾಣಿಗೆ ಗೊತ್ತೇ ಆಗಲಿಲ್ಲ. ಮಂಗಳವಾರ ಅಷ್ಟು ಕೊಳೆತು ಹೋಗಿತ್ತೇ ಉದಯವಾಣಿಯ ಸುದ್ದಿ ಮೂಗು ?  ಡಾಕ್ಟರ್ ಹನೀಫ್‌ನನ್ನು ಆಸ್ಟ್ರೇಲಿಯದಲ್ಲಿ ವಶಕ್ಕೆ ತೆಗೆದುಕೊಂಡಾಗ ಆತನ ವಿರುದ್ಧ ಸುಳ್ಳುಗಳ ಸರಮಾಲೆಯನ್ನೇ ಪ್ರಕಟಿಸಿತ್ತು ಉದಯವಾಣಿ. ಆಸ್ಟ್ರೇಲಿಯ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಹನೀಫ್‌ನ ಕ್ಷಮೆ ಯಾಚಿಸಿತು. ಸುಳ್ಳುಗಳ ಸರದಾರ ಉದಯವಾಣಿ ಆ ಸೌಜನ್ಯವನ್ನೂ ತೋರಿಸಿಲಿಲ್ಲ.

ಇನ್ನು ಹುಬ್ಬಳ್ಳಿಯಲ್ಲಿ ಕೇವಲ ಸಂಶಯದ ಮೇಲೆ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿದಾಗ ಅವರ ಬಳಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಮುಖಪುಟದಲ್ಲೇ ಸರಣಿ ಹಸಿ  ಹಸಿ ಸುಳ್ಳು ಬರೆದು ಓದುಗರಿಂದ ಛೀಮಾರಿ ಹಾಕಿಸಿಕೊಂಡ ಕನ್ನಡ ಪ್ರಭ ಪ್ರವೀಣ್ ಬಂಧನದ ಅಧಿಕೃತ ಸುದ್ದಿಯನ್ನು ಎಂಟನೇ ಪುಟದಲ್ಲಿ ಕೇವಲ ಒಂದು ಪ್ಯಾರಾ ಹಾಕಿ ಮುಗಿಸಿತು.


ಇನ್ನೊಂದು ಭಯೋತ್ಪಾದನೆ ಸ್ಪೆಶಲಿಸ್ಟ್ ಪತ್ರಿಕೆ ಸಂಯುಕ್ತ ಕರ್ನಾಟಕ ಈ ಸುದ್ದಿಗೆ ಸಂಪೂರ್ಣ ಕುರುಡಾಯಿತು. ಸುದ್ದಿ ಪ್ರಕಟಣೆಯ ಭಾಗ್ಯವನ್ನೇ ಪಡೆಯಲಿಲ್ಲ.

ಇನ್ನು ಸ್ವಘೋಷಿತ ಜಾತ್ಯತೀತ ಪತ್ರಿಕೆ ಪ್ರಜಾ ವಾಣಿ ಬುಧವಾರ ಈ ಸುದ್ದಿಯನ್ನು ಒಳಗಿನ ಪುಟದಲ್ಲಿ ಕೇವಲ ಒಂದು ಕಾಲಂನಲ್ಲಿ ಹಾಕಿ ಪ್ರಕಟಿಸಿದ ಶಾಸ್ತ್ರ ಮುಗಿಸಿಬಿಟ್ಟಿತು. ( ಅದೇ ದಿನ ಆ ಪತ್ರಿಕೆಯ ರಾಜ್ಯ ಪುಟದ ಒಂದು ಮೂಲೆಯಲ್ಲೂ ಈ ಸುದ್ದಿ ಅತ್ಯಂತ ಚಿಕ್ಕದಾಗಿ ಪ್ರಕಟವಾಗಿದೆ.  ಗೊತ್ತಾದರೆ ಪ್ರಜಾವಾಣಿಯ ಸಂಪಾದಕೀಯ ಸಿಬ್ಬಂದಿಗಳಿಗೆ ಶಾನೇ ಬೇಜಾರಾಗಬಹುದು !)

 
ವಿಜಯ ಕರ್ನಾಟಕ ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದೇ ದೊಡ್ಡ ಅಚ್ಚರಿ. ಅದರ ಸಂಪಾದಕೀಯ ವಿಭಾಗದಲ್ಲಿ ಇತ್ತೀಚಿಗೆ ಆದ ಪ್ರಮುಖ ಬದಲಾವಣೆಗಳ ಪರಿಣಾಮದಿಂದ ಹೀಗಾಗಿದೆ    . ಆದರೆ “ಮಾಲೆಗಾಂವ್: ಗೋಕಾಕದ ವ್ಯಕ್ತಿ ಸೆರೆ ‘’ಎಂದು ಅರೆಮನಸ್ಸಿನಿಂದ ನೀಡಿದ ಶೀರ್ಷಿಕೆಯಲ್ಲೇ ಸುದ್ದಿಯನ್ನು ಅರ್ಧ ಕೊಂದು ಬಿಡಲಾಗಿದೆ. ಪ್ರವೀಣ್ ಮೇಲಿರುವುದು ಮಾಲೆಗಾಂವ್‌ನ ಮಸೀದಿಯ ಹೊರಗೆ ನಿಲ್ಲಿಸಲಾಗಿದ್ದ ಬೈಕ್‌ನಲ್ಲಿ ಬಾಂಬ್ ಪ್ಲಾಂಟ್ ಮಾಡಿದ ಗುರುತರ ಆರೋಪ.
ಆ ಸ್ಫೋಟದಲ್ಲಿ  6ಮಂದಿ ಮೃತಪಟ್ಟಿದ್ದರು. ಇಂತಹ ಗಂಭೀರ ದುಷ್ಕೃತ್ಯವೆಸಗಿದ ಆರೋಪಿ, ಶಂಕಿತ ಭಯೋತ್ಪಾದಕ ವಿಜಯ ಕರ್ನಾಟಕಕ್ಕೆ  ಕೇವಲ ಒಬ್ಬ ವ್ಯಕ್ತಿ.
ಪ್ರವೀಣ್‌ ಮುತಾಲಿಕ್‌ನ ಬಂಧನದ ಸುದ್ದಿಗೆ  ಸೂಕ್ತ ಪ್ರಾಮುಖ್ಯತೆಯನ್ನು  ನೀಡಿ ಮುಖಪುಟದಲ್ಲೇ ಲೀಡ್ ಸುದ್ದಿಯಾಗಿ ಪ್ರಕಟಿಸಿ  ಈ ಪ್ರಮುಖ ಸುದ್ದಿಯನ್ನು ಕನ್ನಡಿಗರಿಗೆ ಸಮರ್ಪಕವಾಗಿ ತಲುಪಿಸಿದ್ದು  ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಮಾತ್ರ.





  

No comments:

Post a Comment