-->

Sunday, February 6, 2011

ರೈತರು ಆತ್ಮಹತ್ಯೆ ಮಾಡಿದರೆ ಇವರಿಗೆ ಸುದ್ದಿಯೇ ಅಲ್ಲ !

ಶುಕ್ರವಾರ ಇಡೀ ನಾಡು ರಾಜಧಾನಿಯಲ್ಲಿ ನಡೆಯುತ್ತಿದ್ದ ವಾರ್ಷಿಕ ನುಡಿ ಸಂಭ್ರಮವನ್ನು ನೋಡಿ ಖುಷಿ ಪಡುತ್ತಿದ್ದರೆ ಗುಲ್ಬರ್ಗದಲ್ಲಿ ನಮ್ಮ ರೈತರು ಆತ್ಮಹತ್ಯೆಯ ದಾರಿ ತುಳಿದಿದ್ದರು. ಅವರು ಬೆಳೆದ ತೊಗರಿಗೆ ಸರಕಾರ ಬೆಂಬಲ ಬೆಲೆ ನೀಡಲು ಒಪ್ಪದೆ ಅವರು ಬೀದಿಪಾಲಾಗುವ ಪರಿಸ್ಥಿತಿ ಬಂದಿತ್ತು. ಆದ್ದರಿಂದ ಉಪವಾಸ ಸತ್ಯಾಗ್ರಹ ಕೈಗೊಂಡರೂ ಸರಕಾರ ಗಮನ ಹರಿಸಲಿಲ್ಲ. ಕೊನೆಗೆ ಬೇರೆ ದಾರಿ ಕಾಣದೆ ರೈತರು ವಿಷ ಸೇವಿಸಿ ಪ್ರಾಣ ಬಿಡಲು ಮುಂದಾದರು. ಈ ಪೈಕಿ ಐವರು ರೈತರ ಪರಿಸ್ಥಿತಿ ಗಂಭೀರವಾಯಿತು.

ಇಲ್ಲಿ ನೇಗಿಲಯೋಗಿ..... ಎಂದು ಹಾಡಿ ರಾಜ್ಯದ ಜನರು ಸಾಹಿತ್ಯ ಸಂಭ್ರಮದಲ್ಲಿರುವಾಗ ನಮ್ಮ ರೈತರು ಸಾಮೂಹಿಕವಾಗಿ ಆತ್ಮಹತ್ಯೆಗೆ ಮುಂದಾಗಿರುವ ಪರಿಸ್ಥಿತಿ ಬಂದಿರುವುದು ನಮ್ಮ ರಾಜ್ಯದ ದುರಂತ. ಆದರೆ ಅದಕ್ಕಿಂತ ದೊಡ್ಡ ದುರಂತ ನೋಡಿ. ಇಷ್ಟು ದೊಡ್ಡ ದುರ್ಘಟನೆ ಸಂಭವಿಸಿದರೆ ಅದನ್ನು ವರದಿ ಮಾಡಲು ಮನಸ್ಸಾಗದ ಪತ್ರಿಕೆಗಳೂ ನಮ್ಮ ರಾಜ್ಯದಲ್ಲಿವೆ ಎಂಬುದು ಅದಕ್ಕಿಂತ ದೊಡ್ಡ ದುರಂತವಲ್ಲವೇ ?

ಕನ್ನಡ ಪತ್ರಿಕೆಗಳಿಗೆ ಹಿರಿಯಣ್ಣನ ಸ್ಥಾನದಲ್ಲಿರುವ ಪ್ರಮುಖ ಪತ್ರಿಕೆ ಸಂಯುಕ್ತ ಕರ್ನಾಟಕ ಹಾಗು ತನ್ನನ್ನು ೞಓದುಗರು ರೂಪಿಸಿದ ನೇತಾರೞಎಂದು ಘೋಷಿಸಿಕೊಂಡಿರುವ ಉದಯವಾಣಿ -ಈ ಎರಡೂ ದಿನಪತ್ರಿಕೆಗಳಿಗೆ ರೈತರು ಸಾಮೂಹಿಕವಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಸುದ್ದಿಯಾಗಬೇಕಾದ ವಿಷಯ ಎಂದು ಅನಿಸಲೇ ಇಲ್ಲ ! ಇವರದ್ದು ಎಂತಹ ಘನ ಪತ್ರಿಕೋದ್ಯಮವಾಗಿರಬಹುದು?

ವಿಜಯ ಕರ್ನಾಟಕ ಮುಖಪುಟದಲ್ಲಿ ಕೇವಲ ಒಂದು ಪ್ಯಾರಾ ಸುದ್ದಿ ಹಾಕಿದರೂ 7ನೇ ಪುಟದಲ್ಲಿ ಆ ವಿಷಯದ ಕುರಿತು ಮತ್ತೆ ಎರಡು ಕಾಲಂನ ವರದಿ ಪ್ರಕಟಿಸಲು ಮನಸ್ಸು ಮಾಡಿತು. ಪ್ರಜಾವಾಣಿ ಮುಖಪುಟದಲ್ಲಿ ಒಂದು ಕಾಲಂ ಸುದ್ದಿ ಹಾಕಿ ಮುಗಿಸಿತು. ಕನ್ನಡ ಪ್ರಭ 15ನೇ ಪುಟದಲ್ಲಾದರೂ ವಿವರವಾಗಿಯೇ ಈ ಸುದ್ದಿಯನ್ನು ಪ್ರಕಟಿಸಿತು.

ಸಾಹಿತ್ಯ ಸಮ್ಮೇಳನದ ಸುದ್ದಿ ಭರಾಟೆಯ ನಡುವೆಯೂ ರೈತರ ಆತ್ಮಹತ್ಯೆಯ ಸುದ್ದಿಗೆ ಸೂಕ್ತ ಪ್ರಾಮುಖ್ಯತೆ ನೀಡಿ ಮುಖಪುಟದಲ್ಲೇ ವಿವರವಾಗಿ ಅದನ್ನು ಪ್ರಕಟಿಸಿ ಕನ್ನಡಿಗರ ಗಮನ ಸೆಳೆದಿದ್ದು ವಾರ್ತಾಭಾರತಿ ದಿನಪತ್ರಿಕೆ. ಜೊತೆಗೆ ಶನಿವಾರದ ತನ್ನ ಸಂಪಾದಕೀಯದಲ್ಲೂ ಈ ವಿಷಯವನ್ನು ಉಲ್ಲೇಖಿಸಿದೆ ವಾರ್ತಾಭಾರತಿ.

Saturday, February 5, 2011

ಜ್ಯೋತಿ ಗುರುಪ್ರಸಾದ್‌ ರ ಜೋಲಿ ಲಾಲಿ ಅಂಕಣ ಪುಸ್ತಕ ರೂಪದಲ್ಲಿ

‘ವಾರ್ತಾಭಾರತಿ’‘ಯ ಜನಪ್ರಿಯ ಅಂಕಣಕಾರರಲ್ಲೊಬ್ಬರಾದ, ಖ್ಯಾತ ಕವಯತ್ರಿ-ಲೇಖಕಿ ಜ್ಯೊತಿ ಗುರುಪ್ರಸಾದ್ ಅವರ ಅಂಕಣ ಜೋಲಿ-ಲಾಲಿ’  ‘’‘ಇದೀಗ ಪುಸ್ತಕ ರೂಪದಲ್ಲಿ ಬಂದಿದೆ. ಬೆಂಗಳೂರಿನ ದೇಸಿ ಪುಸ್ತಕ ದವರು ಇದನ್ನು ಪ್ರಕಟಿಸಿದ್ದಾರೆ. ಕಲೆ, ಸಾಹಿತ್ಯ, ಸಂಸ್ಕೃತಿ , ಮಹಿಳೆ ಮತ್ತಿತರ ವಿಷಯಗಳ ಕುರಿತು ಅತ್ಯಂತ ಆಪ್ತವಾಗಿ, ಸರಳವಾಗಿ ಬರೆದು ವಾರ್ತಾಭಾರತಿಯ ಅಪಾರ ಓದುಗರನ್ನು ತಮ್ಮ ಅಭಿಮಾನಿಯಾಗಿಸಿಕೊಂಡವರು ಜ್ಯೋತಿ ಗುರುಪ್ರಸಾದ್. ಹಲವು ಕಾಲೇಜುಗಳಲ್ಲಿ ಕನ್ನಡ-ಇಂಗ್ಲಿಷ್ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿರುವ ಜ್ಯೊತಿ ಗುರುಪ್ರಸಾದ್‌ರ ಚುಕ್ಕಿ’ ‘’‘ಕವನ ಸಂಕಲನಕ್ಕೆ ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಪ್ರತಿಷ್ಠಿತ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಬಂದಿದೆ.ಇವರ ಮಾಯಾಪೆಟ್ಟಿಗೆ ಕವನ ಸಂಕಲನಕ್ಕೆ ಕರ್ನಾಟಕ ಲೇಖಕಿಯರ ಸಂಘದ ಗೀತಾ ದೇಸಾಯಿ ದತ್ತಿ ಪ್ರಶಸ್ತಿ , ಕನ್ನಡ ಸಾಹಿತ್ಯ ಪರಿಷತ್‌ನ ನೀಲಗಂಗಾ ದತ್ತಿ ಪ್ರಶಸ್ತಿ ಹಾಗು ನಿರತ ಸಾಹಿತ್ಯ ಪ್ರಶಸ್ತಿಗಳು ಸಂದಿವೆ. ಜ್ಯೋತಿ ಅವರ ಈ ಕ್ಷಣ‘  ಅಂಕಣ ಸಂಕಲನಕ್ಕೆ ಶಿವಮೊಗ್ಗ ಕರ್ನಾಟಕ ಸಂಘದ ಹಾ.ಮಾ.ನಾ.ಪ್ರಶಸ್ತಿ ದೊರೆತಿದೆ. 

ತಮ್ಮ ಹೊಸ ಕೃತಿಯಲ್ಲಿ ಜ್ಯೋತಿ ಗುರುಪ್ರಸಾದ್ ಅವರು ಬರೆದಿರುವ ಮುನ್ನುಡಿಯ ಕೆಲವು ಸಾಲುಗಳು ಇಲ್ಲಿವೆ...

.....ಎಂಟು ವರ್ಷಗಳ ಹಿಂದೆ ಆರಂಭವಾಗಿರುವ ‘ವಾರ್ತಾಭಾರತಿ’ ದಿನಪತ್ರಿಕೆ ಇಂದು ಪ್ರಗತಿಪರ ನಿಲುವಿನ ದಿನಪತ್ರಿಕೆ.ಈ ಪತ್ರಿಕೆ ಪ್ರತಿನಿಧಿಸುವ ಮನುಷ್ಯಪರ ಕಾಳಜಿಗಳನ್ನು ನಾನು ಗಮನಿಸುತ್ತಲೇ ಇದ್ದೆ. ಈ ಪತ್ರಿಕೆಗೆ ನಿಯಮಿತವಾಗಿ ಏನನ್ನಾದರೂ ಬರೆಯುವುದರ ಮೂಲಕ ನನ್ನ ಪಾಲನ್ನು ಇದರಲ್ಲಿ ಸೇರಿಸಬೇಕೆನಿಸುತ್ತಿತ್ತು. ನನ್ನ ಈ ಇಚ್ಛೆಗೆ ತಕ್ಕಂತೆ ವಾರ್ತಾಭಾರತಿ’‘ಯ ಸಂಪಾದಕೀಯ ಬಳಗದವರೂ-ಸಾಹಿತ್ಯ ವಲಯದ ಆಪ್ತರೂ ಆಗಿರುವ ಬಿ.ಎಂ.ಬಶೀರ್ ಅವರಿಂದ ನಾನು ವಾರ್ತಾಭಾರತಿ’‘ಗಾಗಿ ಪ್ರತಿವಾರ ಬರೆಯಬಹುದೆಂಬ ವಿಶ್ವಾಸವೂ ದೊರೆಯಿತು.ಅದಕ್ಕೆ ತಕ್ಕಂತೆ ವಾರ್ತಾಭಾರತಿಯ ಪ್ರಧಾನ ಸಂಪಾದಕರಾಗಿ ಪೋಷಿಸುತ್ತಿರುವ ಮಾನ್ಯ ಎ.ಎಸ್.ಪುತ್ತಿಗೆಯವರ ಸಹಮತವೂ ಸಂಪಾದಕೀಯ ಬಳಗದ ಸತೀಶ್ ಮುಂತಾದವರ ಸಹಕಾರವೂ ದೊರೆಯಿತು.....ಪ್ರೀತಿಯ ‘ವಾರ್ತಾಭಾರತಿ’ಪತ್ರಿಕೆಯ ಇಡೀ ಬಳಗಕ್ಕೆ ನನ್ನ ತುಂಬು ಹೃ ದಯದ ಕೃತಜ್ಞತೆ. ವಾರ್ತಾಭಾರತಿ’ಯಲ್ಲಿ ನನ್ನ ಈ ಜೋಲಿ ಲಾಲಿ ಅಂಕಣ ಬರಹದ ಯಾತ್ರೆ ಇನ್ನೂವರೆಗೂ ಸಾಗುತ್ತಿದೆ.ನನ್ನ ಚಿಂತನೆಯನ್ನೂ ಬದ್ಧತೆಯನ್ನೂ ಇನ್ನಷ್ಟು ಹರಿತಗೊಳಿಸಲು ಸಹಕಾರಿಯಾಗಿದೆ.....
  ಪುಸ್ತಕ ಪ್ರಕಾಶಕರು - ದೇಸಿ ಪುಸ್ತಕ,
# 121, 13ನೆ ಮುಖ್ಯರಸ್ತೆ, ಎಂ.ಸಿ.ಲೇ ಔಟ್,
ವಿಜಯ ನಗರ,ಬೆಂಗಳೂರು-40.ದೂರವಾಣಿ:080-23153558


Wednesday, February 2, 2011

ಕನ್ನಡ ಪತ್ರಿಕೆಗಳ ಕುರುಡುತನ, ಕಿವುಡುತನಕ್ಕೆ ಮದ್ದುಂಟೆ ?

ಭಯೋತ್ಪಾದಕ ವರದಿಗಳನ್ನು ಬರೆಯುವುದರಲ್ಲಿ ನಿಷ್ಣಾತರಾಗಿರುವ ನಮ್ಮ ಕನ್ನಡ ಪತ್ರಕರ್ತರಿಗೆ ಹಾಗು ಅವುಗಳನ್ನು ಭಾರೀ ಪ್ರಾಮುಖ್ಯತೆಯೊಂದಿಗೆ ಸರಣಿ ಧಾರಾವಾಹಿಯಂತೆ ಪ್ರಕಟಿಸುವ ಕನ್ನಡದ ಬಹುತೇಕ ಪತ್ರಿಕೆಗಳಿಗೆ ಹಠಾತ್ತನೆ ಕುರುಡುತನ ಹಾಗು ಕಿವುಡುತನದ ರೋಗ ತಾತ್ಕಾಲಿಕವಾಗಿ ತಗುಲುವುದುಂಟು. ಈ ರೋಗ ಕೆಲವೇ ಕೆಲವು ನಿರ್ದಿಷ್ಟ ಸಮಯ (ಅಂದರೆ ದಿನ) ಮಾತ್ರ ಬಾಧಿಸಿ ನಂತರ ಮಾಯವಾಗುತ್ತದೆ. ಈ ಸಂದರ್ಭದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ ಎಷ್ಟೇ ಪ್ರಮುಖ ಬೆಳವಣಿಗೆಗಳು ಘಟಿಸಿದರೂ ಈ ಪತ್ರಕರ್ತರು ಹಾಗು ಪತ್ರಿಕೆಗಳಿಗೆ ಅದು ಕಣ್ಣಿಗೆ ಬೀಳುವುದೂ ಇಲ್ಲ, ಕಿವಿಗೆ ಕೇಳುವುದೂ ಇಲ್ಲ.

ನಿನ್ನೆ ಅಂದರೆ ಫಬ್ರವರಿ 1,2011ರಂದು ಮತ್ತೆ ಕನ್ನಡದ ಹೆಚ್ಚಿನ ಪತ್ರಿಕೆಗಳು ಹಾಗು ಪತ್ರಕರ್ತರು ಈ ಕುರುಡುತನ ಹಾಗು ಕಿವುಡುತನದ ರೋಗ ಪೀಡಿತರಾಗಿದ್ದಾರೆ. ಇಡೀ ದೇಶದಲ್ಲಿ ಮಾತ್ರವಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಚರ್ಚೆಗೊಳಗಾದ ಮಾಲೆಗಾಂವ್ ಸ್ಫೋಟದ ತನಿಖೆಯಿಂದ ಕೇಸರಿ ಭಯೋತ್ಪಾದನೆಯ ಬೃಹತ್‌ ಜಾಲ ದೇಶದಲ್ಲಿರುವುದು ಬಯಲಾಯಿತು .   ಇಂತಹ ಬಾಂಬ್ ಸ್ಫೋಟದಲ್ಲಿ ನೇರವಾಗಿ ಪಾಲ್ಗೊಂಡ ಆರೋಪ ಹೊತ್ತಿದ್ದ ಕರ್ನಾಟಕದ ಪ್ರವೀಣ್ ಮುತಾಲಿಕ್‌ನನ್ನು ಮಹಾರಾಷ್ಟ್ರ ಪೊಲೀಸರು ಇತ್ತೀಚಿಗೆ ಬಂಧಿಸಿದರು. ಆ ಬಳಿಕ ಮಂಗಳವಾರ ಆತನನ್ನು ಮಹಾರಾಷ್ಟ್ರದ    ವಿಶೇಷ ಮೋಕ ನ್ಯಾಯಾಯಲಕ್ಕೆ ಹಾಜರು ಪಡಿಸಿ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಪಡೆದಿದ್ದಾರೆ. ಈ ಪ್ರವೀಣ್ ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿದ ಆರೋಪ ಹೊತ್ತಿರುವ ಅಭಿನವ್ ಭಾರತ್ ಸಂಘಟನೆಯ ರೂವಾರಿ ಲೆ.ಕ.ಶ್ರೀಕಾಂತ ಪುರೋಹಿತ್‌ನ ಬಂಟನಾಗಿದ್ದವನು. ಹಾಗಾಗಿ ಕೇಸರಿ ಭಯೋತ್ಪಾದನಾ ಜಾಲದಲ್ಲಿ ಇನ್ನೂ ಯಾರ್ಯಾರು ಶಾಮೀಲಾಗಿದ್ದಾರೆ, ಅವರ ಯೋಜನೆಗಳು ಏನೇನು ಎಂಬುದರ ಕುರಿತು ಬಹಳಷ್ಟು ಪ್ರಮುಖ ಮಾಹಿತಿಗಳನ್ನು ಈತನ ವಿಚಾರಣೆಯಿಂದ ಪಡೆಯುವ ಸಾಧ್ಯತೆಯಿದೆ. ಹಾಗಾಗಿ ಈತನ ಬಂಧನ ದೇಶದ ಯಾವುದೇ ಪತ್ರಿಕೆಗೆ ಪ್ರಮುಖ ಸುದ್ದಿ. ಜೊತೆಗೆ ಕರ್ನಾಟಕದ ವ್ಯಕ್ತಿಯೊಬ್ಬ ಇಂತಹ ಪ್ರಮುಖ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಇದೀಗ ಸೆರೆಯಾಗಿರುವುದು ಕನ್ನಡದ ಪತ್ರಿಕೆಗಳಿಗೆ ಸ್ವಾಭಾವಿಕವಾಗಿಯೇ ಬಹಳ ದೊಡ್ಡ ಸುದ್ದಿಯಾಗಬೇಕಿತ್ತು.

ಆದರೆ ದುರಂತ ನೋಡಿ. ಒಂದು ನಿರ್ದಿಷ್ಟ ಸಮುದಾಯದ ಮನುಷ್ಯರು ಜೋರಾಗಿ ಕೆಮ್ಮಿದರೂ ಅಲ್ಲಿ ಭಾರೀ ಸ್ಫೋಟದ ತಯಾರಿ ನಡೆಯುತ್ತಿದೆ...ಭಯೋತ್ಪಾದಕ ಜಾಲ ಸಕ್ರಿಯವಾಗಿದೆ... ಪಾಕಿಸ್ತಾನದವರು ಬಂದು ಇಲ್ಲಿನ ಗಲ್ಲಿಗಲ್ಲಿಗಳಲ್ಲಿ ನೆಲೆಸಿದ್ದಾರೆ... ಮಸೀದಿ, ಮದ್ರಸಗಳಲ್ಲಿ ಭಯೋತ್ಪಾದಕ ತರಬೇತಿ ನೀಡಲಾಗುತ್ತಿದೆ...ಎಂದು ವರದಿಯ   ಹೆಸರಲ್ಲಿ ಪುಟಗಟ್ಟಲೆ ಕತೆ ಹೊಸೆಯುವ ಕನ್ನಡದ ಬಹುತೇಕ ಪತ್ರಿಕೆಗಳು ಈ ಸುದ್ದಿಯನ್ನು ಪ್ರಕಟಿಸುವ ಗೋಜಿಗೇ ಹೋಗಲಿಲ್ಲ.

ದೇಶ, ವಿದೇಶಗಳ ಯಾವ ಮೂಲೆಯಲ್ಲಿ ಭಯೋತ್ಪಾದನೆ ಕುರಿತ ಕೇವಲ ವದಂತಿ ಇದ್ದರೂ ಅದರ ವಾಸನೆಯನ್ನು ಗ್ರಹಿಸುವ ಮೂಗು ಉದಯವಾಣಿಯದ್ದು.  ಆದರೆ ಇಲ್ಲೇ ತನ್ನ ಮೂಗಿನಡಿಯಲ್ಲೇ ದೇಶವನ್ನೇ ಬೆಚ್ಚಿ ಬೀಳಿಸಿದ ಬಾಂಬ್ ಸ್ಫೋಟ ಪ್ರಕರಣವೊಂದರ ಪ್ರಮುಖ ಆರೋಪಿ ಬಂಧಿಸಲ್ಪಟ್ಟಿರುವುದು ಮಾತ್ರ ಉದಯವಾಣಿಗೆ ಗೊತ್ತೇ ಆಗಲಿಲ್ಲ. ಮಂಗಳವಾರ ಅಷ್ಟು ಕೊಳೆತು ಹೋಗಿತ್ತೇ ಉದಯವಾಣಿಯ ಸುದ್ದಿ ಮೂಗು ?  ಡಾಕ್ಟರ್ ಹನೀಫ್‌ನನ್ನು ಆಸ್ಟ್ರೇಲಿಯದಲ್ಲಿ ವಶಕ್ಕೆ ತೆಗೆದುಕೊಂಡಾಗ ಆತನ ವಿರುದ್ಧ ಸುಳ್ಳುಗಳ ಸರಮಾಲೆಯನ್ನೇ ಪ್ರಕಟಿಸಿತ್ತು ಉದಯವಾಣಿ. ಆಸ್ಟ್ರೇಲಿಯ ಸರಕಾರ ತನ್ನ ತಪ್ಪನ್ನು ಒಪ್ಪಿಕೊಂಡು ಹನೀಫ್‌ನ ಕ್ಷಮೆ ಯಾಚಿಸಿತು. ಸುಳ್ಳುಗಳ ಸರದಾರ ಉದಯವಾಣಿ ಆ ಸೌಜನ್ಯವನ್ನೂ ತೋರಿಸಿಲಿಲ್ಲ.

ಇನ್ನು ಹುಬ್ಬಳ್ಳಿಯಲ್ಲಿ ಕೇವಲ ಸಂಶಯದ ಮೇಲೆ ಕೆಲವು ವಿದ್ಯಾರ್ಥಿಗಳನ್ನು ಬಂಧಿಸಿದಾಗ ಅವರ ಬಳಿ ಅಂತಾರಾಷ್ಟ್ರೀಯ ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಮುಖಪುಟದಲ್ಲೇ ಸರಣಿ ಹಸಿ  ಹಸಿ ಸುಳ್ಳು ಬರೆದು ಓದುಗರಿಂದ ಛೀಮಾರಿ ಹಾಕಿಸಿಕೊಂಡ ಕನ್ನಡ ಪ್ರಭ ಪ್ರವೀಣ್ ಬಂಧನದ ಅಧಿಕೃತ ಸುದ್ದಿಯನ್ನು ಎಂಟನೇ ಪುಟದಲ್ಲಿ ಕೇವಲ ಒಂದು ಪ್ಯಾರಾ ಹಾಕಿ ಮುಗಿಸಿತು.


ಇನ್ನೊಂದು ಭಯೋತ್ಪಾದನೆ ಸ್ಪೆಶಲಿಸ್ಟ್ ಪತ್ರಿಕೆ ಸಂಯುಕ್ತ ಕರ್ನಾಟಕ ಈ ಸುದ್ದಿಗೆ ಸಂಪೂರ್ಣ ಕುರುಡಾಯಿತು. ಸುದ್ದಿ ಪ್ರಕಟಣೆಯ ಭಾಗ್ಯವನ್ನೇ ಪಡೆಯಲಿಲ್ಲ.

ಇನ್ನು ಸ್ವಘೋಷಿತ ಜಾತ್ಯತೀತ ಪತ್ರಿಕೆ ಪ್ರಜಾ ವಾಣಿ ಬುಧವಾರ ಈ ಸುದ್ದಿಯನ್ನು ಒಳಗಿನ ಪುಟದಲ್ಲಿ ಕೇವಲ ಒಂದು ಕಾಲಂನಲ್ಲಿ ಹಾಕಿ ಪ್ರಕಟಿಸಿದ ಶಾಸ್ತ್ರ ಮುಗಿಸಿಬಿಟ್ಟಿತು. ( ಅದೇ ದಿನ ಆ ಪತ್ರಿಕೆಯ ರಾಜ್ಯ ಪುಟದ ಒಂದು ಮೂಲೆಯಲ್ಲೂ ಈ ಸುದ್ದಿ ಅತ್ಯಂತ ಚಿಕ್ಕದಾಗಿ ಪ್ರಕಟವಾಗಿದೆ.  ಗೊತ್ತಾದರೆ ಪ್ರಜಾವಾಣಿಯ ಸಂಪಾದಕೀಯ ಸಿಬ್ಬಂದಿಗಳಿಗೆ ಶಾನೇ ಬೇಜಾರಾಗಬಹುದು !)

 
ವಿಜಯ ಕರ್ನಾಟಕ ಈ ಸುದ್ದಿಯನ್ನು ಮುಖಪುಟದಲ್ಲಿ ಪ್ರಕಟಿಸಿದ್ದೇ ದೊಡ್ಡ ಅಚ್ಚರಿ. ಅದರ ಸಂಪಾದಕೀಯ ವಿಭಾಗದಲ್ಲಿ ಇತ್ತೀಚಿಗೆ ಆದ ಪ್ರಮುಖ ಬದಲಾವಣೆಗಳ ಪರಿಣಾಮದಿಂದ ಹೀಗಾಗಿದೆ    . ಆದರೆ “ಮಾಲೆಗಾಂವ್: ಗೋಕಾಕದ ವ್ಯಕ್ತಿ ಸೆರೆ ‘’ಎಂದು ಅರೆಮನಸ್ಸಿನಿಂದ ನೀಡಿದ ಶೀರ್ಷಿಕೆಯಲ್ಲೇ ಸುದ್ದಿಯನ್ನು ಅರ್ಧ ಕೊಂದು ಬಿಡಲಾಗಿದೆ. ಪ್ರವೀಣ್ ಮೇಲಿರುವುದು ಮಾಲೆಗಾಂವ್‌ನ ಮಸೀದಿಯ ಹೊರಗೆ ನಿಲ್ಲಿಸಲಾಗಿದ್ದ ಬೈಕ್‌ನಲ್ಲಿ ಬಾಂಬ್ ಪ್ಲಾಂಟ್ ಮಾಡಿದ ಗುರುತರ ಆರೋಪ.
ಆ ಸ್ಫೋಟದಲ್ಲಿ  6ಮಂದಿ ಮೃತಪಟ್ಟಿದ್ದರು. ಇಂತಹ ಗಂಭೀರ ದುಷ್ಕೃತ್ಯವೆಸಗಿದ ಆರೋಪಿ, ಶಂಕಿತ ಭಯೋತ್ಪಾದಕ ವಿಜಯ ಕರ್ನಾಟಕಕ್ಕೆ  ಕೇವಲ ಒಬ್ಬ ವ್ಯಕ್ತಿ.
ಪ್ರವೀಣ್‌ ಮುತಾಲಿಕ್‌ನ ಬಂಧನದ ಸುದ್ದಿಗೆ  ಸೂಕ್ತ ಪ್ರಾಮುಖ್ಯತೆಯನ್ನು  ನೀಡಿ ಮುಖಪುಟದಲ್ಲೇ ಲೀಡ್ ಸುದ್ದಿಯಾಗಿ ಪ್ರಕಟಿಸಿ  ಈ ಪ್ರಮುಖ ಸುದ್ದಿಯನ್ನು ಕನ್ನಡಿಗರಿಗೆ ಸಮರ್ಪಕವಾಗಿ ತಲುಪಿಸಿದ್ದು  ವಾರ್ತಾಭಾರತಿ ಕನ್ನಡ ದಿನ ಪತ್ರಿಕೆ ಮಾತ್ರ.