-->

Friday, January 28, 2011

ಭಯೋತ್ಪಾದಕರನ್ನು ಮೀರಿಸಿದ ಪತ್ರಿಕೆಗಳು

2010ರ ಎಪ್ರಿಲ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಲಘು ಸ್ಪೋಟ ಪ್ರಕರಣದ ನಂತರ ಕನ್ನಡದ ಬಹುತೇಕ ಪತ್ರಿಕೆಗಳು ತೋರಿಸಿದ ಸಾಮಾಜಿಕ ಕಾಳಜಿ ಹಾಗು ತನಿಖಾ ಸಾಮರ್ಥ್ಯಕ್ಕೆ ಇಡೀ ಕರ್ನಾಟಕವೇ ಬೆಚ್ಚಿಬಿದ್ದಿತುತಿ. ರಾಜ್ಯದ ಗೃಹ ಸಚಿವರು ಹಾಗು ಪೊಲೀಸ್ ಮಹಾ ನಿರ್ದೇಶಕರೇ ನಾಚಿಕೊಂಡು ಕೊನೆಗೆ ‘‘ ದಯಮಾಡಿ ನಮ್ಮ ಕೆಲಸ ಮಾಡಲು ನಮಗೂ ಸ್ವಲ್ಪ ಅವಕಾಶ ಕೊಡಿ ’’ ಎಂದು ಅಂಗಲಾಚಿ ಕೇಳಿಕೊಳ್ಳುವಷ್ಟು ಕ್ಷಿಪ್ರಗತಿಯಲ್ಲಿ ಇಡೀ ಪ್ರಕರಣದ ತನಿಖೆಯನ್ನು ಮುಗಿಸಿ ಅಪರಾಧಿಗಳನ್ನು ಗುರುತಿಸಿದ್ದವು ಕನ್ನಡದ ಪತ್ರಿಕೆಗಳು.

ಫೆಬ್ರವರಿ2010ರಲ್ಲಿ ಪುಣೆಯ ಜರ್ಮನ್ ಬೇಕರಿಯಲ್ಲಿ ನಡೆದ ಸ್ಫೋಟಕ್ಕೂ ಬೆಂಗಳೂರು ಲಘು ಸ್ಫೋಟಗಳಿಗೂ ಸಾಮ್ಯತೆ ಇದೆ ಎಂಬ ಅಂಶ ಈ ಪತ್ರಿಕೆಗಳ ತನಿಖಾ ವರದಿಯಲ್ಲಿ ಭಾರೀ ಪ್ರಾಮುಖ್ಯತೆಯೊಂದಿಗೆ ಆಗಾಗ ಪ್ರಕಟವಾಗುತ್ತಿತ್ತು. ಪುಣೆ ಸ್ಫೋಟಕ್ಕೂ ಬೆಂಗಳೂರು ಘಟನೆಗೂ ಸಾಮ್ಯತೆಯಿಲ್ಲ, ಹಾಗು ಈ ಬಗ್ಗೆ ಈಗಲೇ ಹೇಳುವುದು ಸಾಧ್ಯವೂ ಇಲ್ಲ ಎಂದು ರಾಜ್ಯದ ಡಿಜಿಪಿಯವರೇ ಸ್ಪಷ್ಟವಾಗಿ ಹೇಳಿದ ಬಳಿಕವೂ ಈ ಸಾಮ್ಯತೆಯ ಅಂಶ ಆಗಾಗ ಕನ್ನಡ ಪತ್ರಿಕೆಗಳಲ್ಲಿ ರಾರಾಜಿಸುತ್ತಿತ್ತು.
















ಆದರೆ ವಿಪರ್ಯಾಸ ನೋಡಿ; ಕೆಲವೇ ದಿನಗಳ ಬಳಿಕ ಎಪ್ರಿಲ್30,2010ರಂದು ಅಜ್ಮೀರ್ ದರ್ಗಾ ಸ್ಫೋಟಕ್ಕೆ ಸಂಬಂಧಿಸಿ ರಾಜಸ್ತಾನದ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಸಂಘಪರಿವಾರಕ್ಕೆ ಸೇರಿದ ದೇವೇಂದ್ರ ಗುಪ್ತ ಎಂಬವನನ್ನು ಹಾಗು ಆ ಬಳಿಕ ಚಂದ್ರಶೇಖರ್ ಎಂಬ ವ್ಯಕ್ತಿಯನ್ನು ಬಂಧಿಸಿದರು. ಅಲ್ಲದೆ ಹೈದರಾಬಾದಿನ ಮಕ್ಕಾ ಮಸೀದಿಯಲ್ಲಿ ನಡೆದ ಸ್ಫೋಟಕ್ಕೂ ಅಜ್ಮೀರ್ ದರ್ಗಾ ಸ್ಫೋಟಕ್ಕೂ ಸಾಮ್ಯತೆ ಇದೆ ಎಂಬುದನ್ನು ಸಿಬಿಐ ನಿರ್ದೇಶಕ ಅಶ್ವನಿ ಕುಮಾರ್ ಹೊಸದಿಲ್ಲಿಯಲ್ಲಿ ಮೇ4,2010 ರಂದು ಬಹಿರಂಗಪಡಿಸಿದರು. ಎರಡೂ ಸ್ಫೋಟಕ್ಕೆ ಬಳಸಿದ ವಸ್ತುಗಳು ಹಾಗೂ ರೂಪುರೇಷೆಗಳಲ್ಲಿ ಸಾಮ್ಯತೆಯಿದೆ ಎಂದೂ ಅವರು ವಿವರ ನೀಡಿ ಈ ಕುರಿತು ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ತನಿಖಾಧಿಕಾರಿಗಳು ಏನನ್ನೂ ಹೇಳುವ ಮೊದಲೇ ತನಿಖಾ ವರದಿಗಳ ಹೆಸರಲ್ಲಿ ಸುಳ್ಳಿನ ಕಂತೆಗಳನ್ನು ಪ್ರಕಟಿಸಿದ್ದ ಕನ್ನಡ ಪತ್ರಿಕೆಗಳನ್ನು ಈಗ ಗಮನಿಸಿದವರಿಗೆ ಮಾತ್ರ ಭಾರೀ ಆಘಾತ ಕಾದಿತ್ತು. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯ ನಿರ್ದೇಶಕರು ದೇಶವನ್ನೇ ತಲ್ಲಣಗೊಳಿಸಿದ ಹಾಗು ಬೆಂಗಳೂರು ಲಘು ಸ್ಫೋಟ ಪ್ರಕರಣಗಳಿಗೆ ಹೋಲಿಸಿದರೆ ಭಾರೀ ದೊಡ್ಡ ಪ್ರಮಾಣದ ಎರಡು ಸ್ಫೋಟ ಪ್ರಕರಣಗಳ ಕುರಿತು ಅಧಿಕೃತವಾಗಿ ನೀಡಿದ ಮಾಹಿತಿ ಕನ್ನಡದ ಯಾವ ಪತ್ರಿಕೆಗಳಲ್ಲೂ ವರದಿಯಾಗಲೇ ಇಲ್ಲ. ಕನ್ನಡದ ಓದುಗರಿಗೆ ಇಷ್ಟು ದೊಡ್ಡ ಮೋಸ ಮಾಡಲು ಈ ಯಾವುದೇ ತನಿಖಾ ನಿಪುಣ ಪತ್ರಿಕೆಗಳು ಹಿಂಜರಿಯಲಿಲ್ಲ.



ಈ ಮಹತ್ವದ ಮಾಹಿತಿಯನ್ನು ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿ ಕನ್ನಡದ ಓದುಗರಿಗೆ ತಲುಪಿಸಿದ್ದು ವಾರ್ತಾಭಾರತಿ ಕನ್ನಡ ದಿನಪತ್ರಿಕೆ ಮಾತ್ರ.



No comments:

Post a Comment