ಭಯೋತ್ಪಾದನೆ ಯಾರು ಮಾಡಿದ್ದು ಎಂಬುದನ್ನು ಅವಲಂಬಿಸಿ ಅದರ ಭಯಾನಕತೆ ನಿರ್ಧಾರವಾಗುತ್ತದೆಯೇ ?
ಕೆಲವು ಕನ್ನಡ ಪತ್ರಿಕೆಗಳ ಸಂಪಾದಕರಲ್ಲಿ ಕೇಳಿದರೆ ಇದಕ್ಕೆ ಉತ್ತರ - ಹೌದು !
ಕೆಲವು ಕನ್ನಡ ಪತ್ರಿಕೆಗಳ ಸಂಪಾದಕರಲ್ಲಿ ಕೇಳಿದರೆ ಇದಕ್ಕೆ ಉತ್ತರ - ಹೌದು !
ಹುಬ್ಬಳ್ಳಿ ನ್ಯಾಯಾಲಯ ಸ್ಫೋಟದ ಬಗ್ಗೆ ಉದಯವಾಣಿ ಹಾಗು ವಿಜಯ ಕರ್ನಾಟಕ ಪತ್ರಿಕೆಗಳು ಪ್ರಕಟಿಸಿದ ವರದಿಗಳ ಕೆಲವು ಸ್ಯಾಂಪಲ್ಗಳು ಇಲ್ಲಿವೆ. ನ್ಯಾಯಾಲಯದಲ್ಲಿ ಸ್ಫೋಟ ನಡೆದಿರುವುದು ಒಂದು ವ್ಯವಸ್ಥಿತ ತಂಡದ ಕೃತ್ಯ ಎಂದು ಅಲ್ಲಿನ ಪೊಲೀಸ್ ಆಯುಕ್ತ ನಾರಾಯಣ ನಡಮನಿಯವರು ನೀಡಿದ ಹೇಳಿಕೆಯನ್ನೇ ತನಗೆ ಬೇಕಾದಂತೆ ಅರ್ಥೈಸಿಕೊಂಡ ಉದಯವಾಣಿ, ಇದು ಲಷ್ಕರ್, ಸಿಮಿ ಕೃತ್ಯ ಎಂದೇ ಆಯುಕ್ತರು ಹೇಳಿದ್ದಾರೆ ಎಂದು ಬರೆಯಿತು. ಈ ಕುರಿತು ವಿವಿಧ ಆಂಗಲ್ಲುಗಳಿಂದ ಉದಯವಾಣಿಯ ವರದಿಗಾರರು ಯೋಚಿಸಿ ಯೋಚಿಸಿ ಬರೆದ ವರದಿಗಳು ಪತ್ರಿಕೆಯ ಮುಖಪುಟದಲ್ಲೇ ದೊಡ್ಡದಾಗಿ ಪ್ರಕಟವಾದವು.
.ವಿಜಯ ಕರ್ನಾಟಕ ಇನ್ನೂ ಒಂದು ಹೆಜ್ಜೆ ಮುಂದೆ ಹೋಗದೆ ಇರುವುದು ಸಾಧ್ಯವೇ ? ದೇಶಾದ್ಯಂತ ನಡೆದ ಸ್ಫೋಟಗಳಿಗೂ ಹುಬ್ಬಳ್ಳಿ ನ್ಯಾಯಾಲಯ ಸ್ಫೋಟಕ್ಕೂ ಸಾಮ್ಯತೆ ಇದೆ...ಹುಬ್ಬಳ್ಳಿಯಲ್ಲಿ ಪಾಕಿಸ್ತಾನದ ಉಗ್ರರು ಬಂದು ವಾಸಿಸುತ್ತಿದ್ದಾರೆ...ಇದು ಭಾರೀ ದೊಡ್ಡ ಭಯೋತ್ಪಾದನಾ ದಾಳಿಯ ಎಚ್ಚರಿಕೆ...ಸಿಮಿ, ಲಷ್ಕರ್ ಉಗ್ರರ ಕೈವಾಡ...ಪೊಲೀಸರ ನಿರ್ಲಕ್ಷ...ಎಂದು ಪುಂಖಾನುಪುಂಖವಾಗಿ ‘ವರದಿ’ಗಳನ್ನ ಪ್ರಕಟಿಸಿತು ವಿಜಯ ಕರ್ನಾಟಕ.
![]() |
ಆದರೆ ವಿಪರ್ಯಾಸ ನೋಡಿ. ಅದೇ ಹುಬ್ಬಳ್ಳಿ ಸ್ಫೋಟ ಮಾಡಿದ್ದು ಶ್ರೀರಾಮ ಸೇನೆಯ ಪ್ರಮೋದ್ ಮುತಾಲಿಕ್ರ ಆಪ್ತ ನಾಗರಾಜ ಜಂಬಗಿ ಹಾಗು ಸೇನೆಯ ಇತರ ಕಾರ್ಯಕರ್ತರು ಎಂದು ಪೊಲೀಸರು ಅವರನ್ನು ಬಂಧಿಸಿದಾಗ ಮಾತ್ರ ಆ ಪ್ರಮುಖ ಸುದ್ದಿಗೆ ಈ ಪತ್ರಿಕೆಗಳ ಮುಖಪುಟದಲ್ಲಿ ಜಾಗವೇ ಇಲ್ಲ. ಉದಯವಾಣಿ ಈ ಸುದ್ದಿಯನ್ನು ಹತ್ತರಲ್ಲಿ ಹನ್ನೊಂದು ಎಂಬಂತೆ ಏಳನೇ ಪುಟದಲ್ಲಿ ಹಾಕಿ ಕೈತೊಳೆದುಕೊಂಡಿತು. ಸ್ಫೋಟದ ಬಗ್ಗೆ 5-6ಕಾಲಮುಗಳಲ್ಲಿ ಯಾರ್ಯಾರ ತಲೆಗೆ ಆರೋಪ ಕಟ್ಟಿ ಬರೆಯುತ್ತಿದ್ದ ವಿಜಯ ಕರ್ನಾಟಕ ಈ ಸುದ್ದಿಯನ್ನು ಎರಡೇ ಕಾಲಮ್ಮುಗಳಲ್ಲಿ ಮುಗಿಸಿತು.
ಈ ಕುರಿತ ಎರಡೂ ಪತ್ರಿಕೆಗಳ ವರದಿಗಳಲ್ಲಿ ಶ್ರೀರಾಮ ಸೇನೆಯದಾಗಲಿ, ಮುತಾಲಿಕನ ಬಗೆಯಾಗಲಿ ಉಲ್ಲೇಖವೂ ಇರಲಿಲ್ಲ ಎಂದು ಬೇರೆ ಹೇಳಬೇಕಿಲ್ಲ ತಾನೇ ? ಈ ವರದಿಯನ್ನು ಸೂಕ್ತ ಪ್ರಾಮುಖ್ಯತೆಯೊಂದಿಗೆ ಪ್ರಕಟಿಸಿದ್ದು ಮಾತ್ರವಲ್ಲದೆ ಜಂಬಗಿ ಹಾಗು ಪ್ರಮೋದ್ ಮುತಾಲಿಕ್ ನಡುವಿನ ಬಾಂಧವ್ಯದ ಕುರಿತು ಸಾಕ್ಷಿ ಸಮೇತ ಬರೆದದ್ದು ವಾರ್ತಾಭಾರತಿ ಪತ್ರಿಕೆ ಮಾತ್ರ.










